ಸಾರ್ಥಕತೆಯ ಹೊಸ ಭಾಷ್ಯದಂತಿತ್ತು ಅಂದಿನ ದಿನ. ಪುಸ್ತಕಗಳು ಹೇರಿದ್ದ ಕಾರನ್ನು ಶಾಲೆಯ ಆವರಣದೊಳಗೆ ತಂದು ನಿಲ್ಲಿಸಿದಾಗ, ಧೋ ಎಂದು ಮುತ್ತಿತ್ತು ಹುಡುಗರ ದಂಡು. "ಸರ್, ಪುಸ್ತಕಗಳನ್ನು ಕೊಡ್ತೀರಂತೆ, ಎಷ್ಟು ಕೊಡ್ತೀರ" ಅಂತೊಬ್ಬ, "ಸರ್, ನನ್ಗೂ ಒಂದು ಕೊಡಿ" ಅಂತ ಮತ್ತೊಬ್ಬ ಕಿರುಚ್ತಿದ್ದಾಗ ಉಪಾಧ್ಯಾಯರು ಜೋರಾಗಿ "ಏಯ್, ಎಲ್ರಿಗೂ ಕೊಡ್ತಾರೆ ಹೋಗ್ರಿ ಈಗ" ಅಂತ ಗದರಿದರು.
ಅಷ್ಟರಲ್ಲಿ ಬಳಗದ ಎನ್. ಚಂದ್ರಶೇಖರ ಮತ್ತು ಕುಟುಂಬಸಮೇತರಾಗಿ ಸುಶೀಲಾ ಗೌಡ ಬಂದರು. ಇಸ್ಕಾನ್ ನಿಂದ ಬಿಸಿಯೂಟಕ್ಕೆ ಹುಡುಗರೆಲ್ಲಾ ಸಾಲಾಗಿ ನಿಂತಿದ್ದರು. ಬಿಸಿಬೇಳೆ ಭಾತ್ ಮತ್ತು ಕಡ್ಲೆ ಬೇಳೆ ಪಾಯಸದ ಘಮ್ ಎಲ್ಲಕಡೆ ಆವರಿಸಿತ್ತು.
ಮಕ್ಕಳ ಊಟವೆಲ್ಲಾ ಮುಗಿಯುತ್ತಿದ್ದಂತೆ ಎಲ್ಲರನ್ನೂ ಸರತಿಯಲ್ಲಿ ನಿಲ್ಲಿಸಲಾಯ್ತು. ೧,೨ ಮತ್ತು ೩ ನೇ ತರಗತಿಯ ("ನಲಿಕಲಿ" ಅಂತಾರೆ) ಮಕ್ಕಳಿಗೆ ನೋಟ್ ಪುಸ್ತಕ, ಪೆನ್ಸಿಲ್ ಮತ್ತು ಎರೇಸರ್ ಹಂಚಲಾಯ್ತು. ಆದ್ರೆ ೪,೫,೬ ಮತ್ತು ೭ ನೇ ತರಗತಿಯ ತಲಾ ೧೦ ಮಕ್ಕಳಿಗೆ ಮಾತ್ರ ಪುಸ್ತಕ ಕೊಡುವ ಯೋಜನೆ ಇತ್ತು. ಆದರೆ ಉತ್ಸಾಹದ ಬುಗ್ಗೆಗಳಿದ್ದ ಹಾಗಿದ್ದ ಮಕ್ಕಳಿಗೆ ನಿರಾಸೆ ಮಾಡಲು ಮನ್ನಸ್ಸಾಗಲಿಲ್ಲ. ಹಾಗಾಗಿ ಪುಸ್ತಕಗಳನ್ನು ಮುಂದೊಮ್ಮೆ ಉಪಾಧ್ಯಾರಿಗೇ ಕೊಡಲು ಹೇಳಿ ಎಲ್ಲರಿಗೂ ಪೆನ್ಸಿಲ್ ಮತ್ತು ಎರೇಸರ್ ನ್ನು ಕೊಟ್ಟೆವು. ಆ ಮಕ್ಕಳ ಉತ್ಸಾಹ, ಅವರ ಸಂತೋಷ ಖಂಡಿತಾ ಪದಗಳಲ್ಲಿ ಮೂಡಿಸಲು ಆಗ್ತಿಲ್ಲ. ಅದನ್ನು ಸವಿದರೇ ಸೊಗಸು.
ಉಪಾಧ್ಯಾಯರೆಲ್ಲರೂ ಬಳಗಕ್ಕೇ ಧನ್ಯವಾದಗಳನ್ನು ಅರ್ಪಿಸಿದರು. ಶೈಕ್ಷಣಿಕ ವರ್ಷ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಪುಸ್ತಕಗಳನ್ನು ಕೊಟ್ಟದ್ದು ಬಹಳ ಉಪಯುಕ್ತವಾಯ್ತು ಅಂತ ಬಹಳ ಸಲ ನೆನೆದರು.
ಕಾರಿನಲ್ಲಿದ್ದ ಬಳಗದ ಲೇಬಲ್ ಗಳನ್ನು ನೋಡಿದ ಕೆಲವು ಹುಡುಗರು, "ಸರ್, ನಮ್ಗೆ ಆ ಸ್ಟಿಕ್ಕರ್ಸ್ ಕೊಡಿ" ಅಂದ್ರು. ಸರಿ, ಉಳಿದ ಸುಮಾರು ೫೦ ಲೇಬಲ್ ಗಳನ್ನು ಕೊಟ್ಟಾಗ ಜಗಳವಾಡಿಕೊಂಡು ಹಂಚಿಕೊಂಡರು. ಆ ಜಗಳ, ಹುಸಿ ಮುನಿಸು, ಸಂತೋಷ, ಉತ್ಸಾಹ, ಮುಗ್ಧತೆ, ನಗು - ಛೇ ನಮಗೆ ಬರಲು ಸಾಧ್ಯವೇ ಇಲ್ಲ. ಮಕ್ಕಳು ಮಕ್ಕಳೇ !!
ಸಾರ್ಥಕ ಭಾವದಿಂದ ಮನ ತುಂಬಿ ಬಂದಿತ್ತು. ಮುಂದಿನ ವರ್ಷ ಖಂಡಿತಾ ಎಲ್ಲ ಮಕ್ಕಳಿಗೂ ಪುಸ್ತಕಗಳನ್ನು ಕೊಡಬೇಕೆಂಬ ನಿರ್ಧಾರದೊಂದಿಗೆ ಎಲ್ಲರನ್ನೂ ಬೀಳ್ಕೊಟ್ಟೆವು.
ಈ ಸಾರ್ಥಕ ಯೋಜನೆಯನ್ನು ಸಾಕಾರಗೊಳಿಸಿದ ಬಳಗದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
-ಅಂಜನ್
ಶನಿವಾರ, ಜೂನ್ 5, 2010
ರಾಮಮೂರ್ತಿ ನಗರದ ಶಾಲೆಗೆ ನೋಟ್ ಪುಸ್ತಕ ವಿತರಣೆ
ಸಮಯ 04:22 PM
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
0 ಅಭಿಪ್ರಾಯಗಳು:
ಕಾಮೆಂಟ್ ಪೋಸ್ಟ್ ಮಾಡಿ