ಬುಧವಾರ, ಜುಲೈ 6, 2011

ಕಲಿಕಾ ಸಾಮಗ್ರಿ ವಿತರಣಾ ಯೋಜನೆ - ೨೦೧೧ - ಗುಡಿಬಂಡೆಯ ಶಾಲೆ

ಗುಡಿಯ ಅನುಭವ:

ಅದ್ಭುತ, ಅಮೋಘ, ಅನನ್ಯ - ಯಾವ ಪದದಿಂದಲೇ ವರ್ಣಿಸಿ, ಗುಡಿಬಂಡೆ ಶಾಲೆಯ ಮುಂದೆ ಅದು ಕಡಿಮೆಯೇ..

ಅಂಥ ಅಮೋಘವಾದ ಶಾಲೆಯ ಜೊತೆ ಸಖ್ಯ ಹೊಂದಿರುವುದೇ ಬಳಗಕ್ಕೆ ಒಂದು ಹೆಮ್ಮೆ.

ನಮ್ಮ ಜೊತೆಗೆ ಬಂದಿದ್ದ ಸಿ.ಎಸ್. ಪ್ರಸಾದ ಅನ್ನುವ ಅಧ್ಯಾಪಕರು (ಕನ್ನಡ ವ್ಯಾಕರಣ ಪುಸ್ತಕದ ಕರ್ತೃ, ಇವರ ಪುಸ್ತಕವನ್ನೇ ನಾವು ಮಕ್ಕಳಿಗೆ ಕೊಟ್ಟೆವು)

"ಎಂಥ ಅದ್ಭುತ ಶಾಲೆ. ವಿದ್ಯಾರ್ಥಿ, ಶಿಕ್ಷಕರ ಸಂಬಂಧ ಎಷ್ಟು ವಿಶಿಷ್ಠ. ಈ ರೀತಿ ಬೆಂಗಳೂರಿನಲ್ಲಿ ಕಾಣಲು ಸಾಧ್ಯವೇ ಇಲ್ಲ " ಅಂದುಬಿಟ್ಟರು.

ನಮ್ಮನ್ನು ಶಾಲೆಯೊಳಗೆ ಎದುರುಗೊಂಡ ರೀತಿ, ಸತ್ಕಾರ, ೪ ಗಂಟೆ ಅಲ್ಲಾಡದ ಹಾಗೆ, ಕಾರ್ಯಕ್ರಮ ವೀಕ್ಷಿಸಿದ ೩೮೦ ಮಕ್ಕಳು !!!

ಇದೆಲ್ಲಕ್ಕೂ ನಮ್ಮ ಮನಸ್ಸನ್ನು ಕಲಕಿದ ಸಂಗತಿ ಇದು.

ಅಲ್ಲಿನ ಸುಮಾರು ೫ ಉಪಾಧ್ಯಾಯರಿಗೆ ಬೇರೆ ಊರಿಗೆ ವರ್ಗಾವಣೆಯಾಗಿದೆ. ಅವರಿಗೆ ನಮ್ಮ ಬಳಗದ ಸಮ್ಮುಖದಲ್ಲಿ ಬೀಳ್ಕೊಡುಗೆ ಏರ್ಪಡಿಸಿದ್ದರು. "ಶಫಿ" ಅವರು (ವರ್ಗಾವಣೆಯಾದ ಉಪಾದ್ಯಾಯರಲ್ಲೊಬ್ಬರು) ಮಾತನಾಡಲು ವೇದಿಕೆಗೆ ಬಂದರೆ, ಅವರಿಗೆ ಮಾತು ಹೊರಡುತ್ತಿಲ್ಲ. ಬಿಕ್ಕಿ ಅಳುತ್ತಿದ್ದಾರೆ. ನೋಡಿದರೆ, ಮಕ್ಕಳೆಲ್ಲಾ ಅಳುತ್ತಿದ್ದಾರೆ. ನಮಗೆ ಇದೇನಾಗುತ್ತಿದೆ ಅಂತ ಕಣ್ಣನ್ನು ದೊಡ್ಡದು ಮಾಡಿ ನೋಡುತ್ತಿದ್ದೇವೆ.

ನಂತರ ಬಂದ ಮತ್ತೊಬ್ಬ ಉಪಾಧ್ಯಾಯರಾದ "ಪ್ರವೀಣ್ ಕುಮಾರ್" ಹೇಳ್ತಿದ್ರು, ಅವರ ಮನೆಯಲ್ಲೇ ಅವರೊಬ್ಬ ಕಟುಕರ ಹಾಗಂತೆ. ಕಣ್ಣಲ್ಲಿ ನೀರು ಬಂದಿದ್ದು ಯಾರೂ ನೋಡಿಲ್ಲ. ಅವರ ಹೆಂಡತಿಗಿರುವ ಆಸೆ ಅಂದ್ರೆ ಇವರು ಅಳೋದು ನೋಡಬೇಕಂತೆ !!! ಅಂತ ಪ್ರವೀಣ್ ಶಾಲೆ ಬಿಡಬೇಕಲ್ಲ ಅಂತ ಅತ್ತಿದ್ದಾರೆ.

ಇದಿಷ್ಟು ನಿದರ್ಶನ ಸಾಕು ಶಾಲೆಯಲ್ಲಿ ಎಂಥ ವಾತಾವರಣವಿದೆ ಎಂದು ತಿಳಿಯೋಕೆ..

ನಂತರ, ಸುಮಾರು ೮೦ ಸಾವಿರ ರೂಪಾಯಿಗಳಷ್ಟು ಪ್ರತಿಭಾ ಪುರಸ್ಕಾರ ಮತ್ತು ಕಲಿಕಾ ಸಾಮಗ್ರಿಗಳನ್ನು ಹಂಚಿದೆವು. ಇದಕ್ಕೆಲ್ಲಾ ಕಾರಣರಾದ ಬಳಗದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

ಪ್ರತಿ ಭೇಟಿಯಲ್ಲೂ ಅನನ್ಯ ಅನುಭವ ನೀಡುತ್ತಿರುವ ಗುಡಿಬಂಡೆ ಶಾಲೆಗೆ ಬಳಗದ ಪರವಾಗಿ ಅತ್ಯಂತ ಧನ್ಯವಾದಗಳು.


ಚಿತ್ರಗಳು:

http://www.facebook.com/media/set/?set=a.136817176398785.35965.100002115116128&l=20b8eabc4b

ಗುರುವಾರ, ಜೂನ್ 23, 2011

ಕಲಿಕಾ ಸಾಮಗ್ರಿ ವಿತರಣಾ ಯೋಜನೆ - ೨೦೧೧ - ರಾಮಮೂರ್ತಿ ನಗರದ ಶಾಲೆ

ನಮ್ಮ ಮೊದಲ ಕಾರ್ಯಕ್ರಮ ರಾಮಮೂರ್ತಿ ನಗರದ ಕೌದೇನಹಳ್ಳಿ ಶಾಲೆಯಲ್ಲಿ ಯಶಸ್ವಿಯಾಗಿ ನೆರವೇರಿತು.

ಎಲ್ಲ ಮಕ್ಕಳಿಗೂ ವರುಷಕ್ಕಾಗುವಷ್ಟು ಪುಸ್ತಕಗಳು, ಪೆನ್ಸಿಲ್ಲು, ಪೆನ್ನು, ಜ್ಯಾಮಿತಿ ಪೆಟ್ಟಿಗೆಯನ್ನು ಹಂಚಿದೆವು.

ಮಕ್ಕಳಲ್ಲಿ ಪುಟಿಯುತ್ತಿದ್ದ ಆನಂದ, ಉಪಾಧ್ಯಾಯರ ಮುಖಗಳನ್ನೂ ಚಿಮ್ಮುತ್ತಿತ್ತು.



ಬಹಳ ಸಾರ್ಥಕವಾದ ಕಾರ್ಯಕ್ರಮ. ಚಿತ್ರಗಳನ್ನು ನಾಳೆ ಕಳಿಸುತ್ತೇವೆ.



ಬಳಗದಿಂದ ಭಾಗವಹಿಸಿದ ಪ್ರಶಾಂತ್, ಸುಂದರೇಶ್, ಅಶ್ವತ್ಥ್, ಕಲಾವತಿ, ಅಂಜನ್ ಮತ್ತು ಚಂದ್ರು ಅವರಿಗೆ ಧನ್ಯವಾದಗಳು.



ಕೊನೆಯದಾಗಿ:

ಉಪಾಧ್ಯಾಯರಾದ ಜಯಂತಿ ಕುಮಾರಿಯವರು ಬಳಗದ ಕಾರ್ಯದ ಬಗೆಗೆ ಸ್ಫೂರ್ತಿಗೊಂಡು, ಅಲ್ಲೇ ಒಂದು ಸಣ್ಣ ಕವಿತೆ ರಚಿಸಿ,

ಮೇಳದೊಡನೆ ಹಾಡಿದಾಗ, ನಮ್ಮಲ್ಲಿ ಖಂಡಿತಾ ಒಂದು ತೃಪ್ತಿ ತುಂಬಿತ್ತು.

ಚಿತ್ರಗಳು:
http://www.facebook.com/media/set/?set=a.133329886747514.35112.100002115116128&l=e9267a2dff

ಶನಿವಾರ, ಫೆಬ್ರವರಿ 5, 2011

ಬೀಚಗಾನಹಳ್ಳಿ, ಗುಡಿಬಂಡೆ, ಆವಲ ಬೆಟ್ಟ ಕಾರ್ಯಕ್ರಮ


ಬಳಗದ ಮತ್ತೊಂದು ಸಾರ್ಥಕ ದಿನ. ಅದರ ಅನುಭವವನ್ನು ಇಲ್ಲಿ ವ್ಯಕ್ತ ಪಡಿಸೋದು ದುಸ್ಸಾಹದ ಕೆಲಸ.

ಈ ಬಾರಿ ಕುಟುಂಬದ ಜೊತೆಗೆ ಹೋಗಿದ್ದು ಮತ್ತಷ್ಟು ಭಾಗಿತ್ವವನ್ನು ಕೊಡಲು ಸಹಾಯ ಮಾಡಿತು. ಬೆಳಿಗ್ಗೆ ಸುಮಾರು ೭ ಗಂಟೆಗೆ ಹೊರಟ ನಾವು, ೯ ಗಂಟೆಗೆಲ್ಲಾ ಕಾಮತ್ ನಲ್ಲಿ ತಿಂಡಿ ಮುಗಿಸಿ ಮೊದಲು ಬೀಚಗಾನಹಳ್ಳಿಗೆ ಹೋದೆವು. ಅಲ್ಲಿನ ವಾತಾವರಣ, ಮಕ್ಕಳ ಶಿಸ್ತು ನಮ್ಮನ್ನ ಯಾವುದೋ ಲೋಕದಲ್ಲಿ ತೇಲಾಡಿಸಿತು.

ಅಲ್ಲಿನ ಕಾರ್ಯಕ್ರಮ ಮುಗಿದಮೇಲೆ. ೧೫ ಕಿ.ಮೀ ಪ್ರಯಾಣ ಮಾಡಿ ಗುಡಿಬಂಡೆಗೆ ಬಂದೆವು. ಪ್ರತಿಭಾನ್ವಿತ ಮಕ್ಕಳಿಗೆ ಬಹುಮಾನಗಳನ್ನು ಕೊಟ್ಟು, ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ತಯಾರಾಗಲು ಹುರಿದುಂಬಿಸಿ, ಆರ್ಥಿಕವಾಗಿ ನಿಶಕ್ತರಾದ ಪ್ರತಿಭೆಗಳಿಗೆ ನಮ್ಮ ನೆರವಿನ ಭರವಸೆ ಕೊಟ್ಟೆವು.

ಅಲ್ಲಿಂದ ಆವಲ ಬೆಟ್ಟಕ್ಕೆ ಹೊರಟೆವು. ಬೆಟ್ಟದ ತುದಿ ತಲುಪುವಷ್ಟರಲ್ಲಿ ಹೊಟ್ಟೆ ತಾಂಡವವಾಡುತ್ತಿತ್ತು. ಅಲ್ಲಿಳಿದ ತಕ್ಷಣ ಅಲ್ಲಿನ ವಾತಾವರಣ, ಸುಂಯ್ಯ್ ಎಂದು ಬೀಸುವ ಗಾಳಿಗೆ ಮನಸ್ಸು ಆಹಾ, ಎಂಥಾ ಸುದಿನವಿದು ಅನ್ನಿಸಿತು. ಪುಷ್ಕಳ ಊಟ ಮಾಡಿ, ಮಕ್ಕಳ ಹಾಡು, ನಾಟಕ ಆಸ್ವಾದಿಸಿ, ಅವರು ಮಾಡುವ ತರ್ಲೆಗಳಿಗೆ ಆಗಾಗ ಗುರಾಯಿಸಿ, ಬೆಟ್ಟದಲ್ಲಿ ಓಡಾಡಿ, ಅಲ್ಲೇ ಇರುವ ದೇವಸ್ಥಾನಕ್ಕೆ ಭೇಟಿ ನೀಡಿ, ಹೊರಡುವಾಗ ಸಂಜೆ ೫ ಗಂಟೆ.

ದೇಹ ತಣಿದಿತ್ತು, ಮನಸ್ಸು ಪ್ರಫುಲ್ಲಿಸಿತ್ತು. ಬರದವರ ಬಗ್ಗೆ ಮರುಕ ಹುಟ್ಟಿತ್ತು.

ಮುಂದಿನ ಬಾರಿ ನೀವು ಬನ್ನಿ. ಬರ್ತೀರಲ್ವಾ?