ಸೋಮವಾರ, ನವೆಂಬರ್ 25, 2013
ಬುಧವಾರ, ಜುಲೈ 6, 2011
ಕಲಿಕಾ ಸಾಮಗ್ರಿ ವಿತರಣಾ ಯೋಜನೆ - ೨೦೧೧ - ಗುಡಿಬಂಡೆಯ ಶಾಲೆ
ಗುಡಿಯ ಅನುಭವ:
ಅದ್ಭುತ, ಅಮೋಘ, ಅನನ್ಯ - ಯಾವ ಪದದಿಂದಲೇ ವರ್ಣಿಸಿ, ಗುಡಿಬಂಡೆ ಶಾಲೆಯ ಮುಂದೆ ಅದು ಕಡಿಮೆಯೇ..
ಅಂಥ ಅಮೋಘವಾದ ಶಾಲೆಯ ಜೊತೆ ಸಖ್ಯ ಹೊಂದಿರುವುದೇ ಬಳಗಕ್ಕೆ ಒಂದು ಹೆಮ್ಮೆ.
ನಮ್ಮ ಜೊತೆಗೆ ಬಂದಿದ್ದ ಸಿ.ಎಸ್. ಪ್ರಸಾದ ಅನ್ನುವ ಅಧ್ಯಾಪಕರು (ಕನ್ನಡ ವ್ಯಾಕರಣ ಪುಸ್ತಕದ ಕರ್ತೃ, ಇವರ ಪುಸ್ತಕವನ್ನೇ ನಾವು ಮಕ್ಕಳಿಗೆ ಕೊಟ್ಟೆವು)
"ಎಂಥ ಅದ್ಭುತ ಶಾಲೆ. ವಿದ್ಯಾರ್ಥಿ, ಶಿಕ್ಷಕರ ಸಂಬಂಧ ಎಷ್ಟು ವಿಶಿಷ್ಠ. ಈ ರೀತಿ ಬೆಂಗಳೂರಿನಲ್ಲಿ ಕಾಣಲು ಸಾಧ್ಯವೇ ಇಲ್ಲ " ಅಂದುಬಿಟ್ಟರು.
ನಮ್ಮನ್ನು ಶಾಲೆಯೊಳಗೆ ಎದುರುಗೊಂಡ ರೀತಿ, ಸತ್ಕಾರ, ೪ ಗಂಟೆ ಅಲ್ಲಾಡದ ಹಾಗೆ, ಕಾರ್ಯಕ್ರಮ ವೀಕ್ಷಿಸಿದ ೩೮೦ ಮಕ್ಕಳು !!!
ಇದೆಲ್ಲಕ್ಕೂ ನಮ್ಮ ಮನಸ್ಸನ್ನು ಕಲಕಿದ ಸಂಗತಿ ಇದು.
ಅಲ್ಲಿನ ಸುಮಾರು ೫ ಉಪಾಧ್ಯಾಯರಿಗೆ ಬೇರೆ ಊರಿಗೆ ವರ್ಗಾವಣೆಯಾಗಿದೆ. ಅವರಿಗೆ ನಮ್ಮ ಬಳಗದ ಸಮ್ಮುಖದಲ್ಲಿ ಬೀಳ್ಕೊಡುಗೆ ಏರ್ಪಡಿಸಿದ್ದರು. "ಶಫಿ" ಅವರು (ವರ್ಗಾವಣೆಯಾದ ಉಪಾದ್ಯಾಯರಲ್ಲೊಬ್ಬರು) ಮಾತನಾಡಲು ವೇದಿಕೆಗೆ ಬಂದರೆ, ಅವರಿಗೆ ಮಾತು ಹೊರಡುತ್ತಿಲ್ಲ. ಬಿಕ್ಕಿ ಅಳುತ್ತಿದ್ದಾರೆ. ನೋಡಿದರೆ, ಮಕ್ಕಳೆಲ್ಲಾ ಅಳುತ್ತಿದ್ದಾರೆ. ನಮಗೆ ಇದೇನಾಗುತ್ತಿದೆ ಅಂತ ಕಣ್ಣನ್ನು ದೊಡ್ಡದು ಮಾಡಿ ನೋಡುತ್ತಿದ್ದೇವೆ.
ನಂತರ ಬಂದ ಮತ್ತೊಬ್ಬ ಉಪಾಧ್ಯಾಯರಾದ "ಪ್ರವೀಣ್ ಕುಮಾರ್" ಹೇಳ್ತಿದ್ರು, ಅವರ ಮನೆಯಲ್ಲೇ ಅವರೊಬ್ಬ ಕಟುಕರ ಹಾಗಂತೆ. ಕಣ್ಣಲ್ಲಿ ನೀರು ಬಂದಿದ್ದು ಯಾರೂ ನೋಡಿಲ್ಲ. ಅವರ ಹೆಂಡತಿಗಿರುವ ಆಸೆ ಅಂದ್ರೆ ಇವರು ಅಳೋದು ನೋಡಬೇಕಂತೆ !!! ಅಂತ ಪ್ರವೀಣ್ ಶಾಲೆ ಬಿಡಬೇಕಲ್ಲ ಅಂತ ಅತ್ತಿದ್ದಾರೆ.
ಇದಿಷ್ಟು ನಿದರ್ಶನ ಸಾಕು ಶಾಲೆಯಲ್ಲಿ ಎಂಥ ವಾತಾವರಣವಿದೆ ಎಂದು ತಿಳಿಯೋಕೆ..
ನಂತರ, ಸುಮಾರು ೮೦ ಸಾವಿರ ರೂಪಾಯಿಗಳಷ್ಟು ಪ್ರತಿಭಾ ಪುರಸ್ಕಾರ ಮತ್ತು ಕಲಿಕಾ ಸಾಮಗ್ರಿಗಳನ್ನು ಹಂಚಿದೆವು. ಇದಕ್ಕೆಲ್ಲಾ ಕಾರಣರಾದ ಬಳಗದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
ಪ್ರತಿ ಭೇಟಿಯಲ್ಲೂ ಅನನ್ಯ ಅನುಭವ ನೀಡುತ್ತಿರುವ ಗುಡಿಬಂಡೆ ಶಾಲೆಗೆ ಬಳಗದ ಪರವಾಗಿ ಅತ್ಯಂತ ಧನ್ಯವಾದಗಳು.
ಚಿತ್ರಗಳು:
http://www.facebook.com/media/set/?set=a.136817176398785.35965.100002115116128&l=20b8eabc4b
ಗುರುವಾರ, ಜೂನ್ 23, 2011
ಕಲಿಕಾ ಸಾಮಗ್ರಿ ವಿತರಣಾ ಯೋಜನೆ - ೨೦೧೧ - ರಾಮಮೂರ್ತಿ ನಗರದ ಶಾಲೆ
ನಮ್ಮ ಮೊದಲ ಕಾರ್ಯಕ್ರಮ ರಾಮಮೂರ್ತಿ ನಗರದ ಕೌದೇನಹಳ್ಳಿ ಶಾಲೆಯಲ್ಲಿ ಯಶಸ್ವಿಯಾಗಿ ನೆರವೇರಿತು.
ಎಲ್ಲ ಮಕ್ಕಳಿಗೂ ವರುಷಕ್ಕಾಗುವಷ್ಟು ಪುಸ್ತಕಗಳು, ಪೆನ್ಸಿಲ್ಲು, ಪೆನ್ನು, ಜ್ಯಾಮಿತಿ ಪೆಟ್ಟಿಗೆಯನ್ನು ಹಂಚಿದೆವು.
ಮಕ್ಕಳಲ್ಲಿ ಪುಟಿಯುತ್ತಿದ್ದ ಆನಂದ, ಉಪಾಧ್ಯಾಯರ ಮುಖಗಳನ್ನೂ ಚಿಮ್ಮುತ್ತಿತ್ತು.
ಬಹಳ ಸಾರ್ಥಕವಾದ ಕಾರ್ಯಕ್ರಮ. ಚಿತ್ರಗಳನ್ನು ನಾಳೆ ಕಳಿಸುತ್ತೇವೆ.
ಬಳಗದಿಂದ ಭಾಗವಹಿಸಿದ ಪ್ರಶಾಂತ್, ಸುಂದರೇಶ್, ಅಶ್ವತ್ಥ್, ಕಲಾವತಿ, ಅಂಜನ್ ಮತ್ತು ಚಂದ್ರು ಅವರಿಗೆ ಧನ್ಯವಾದಗಳು.
ಕೊನೆಯದಾಗಿ:
ಉಪಾಧ್ಯಾಯರಾದ ಜಯಂತಿ ಕುಮಾರಿಯವರು ಬಳಗದ ಕಾರ್ಯದ ಬಗೆಗೆ ಸ್ಫೂರ್ತಿಗೊಂಡು, ಅಲ್ಲೇ ಒಂದು ಸಣ್ಣ ಕವಿತೆ ರಚಿಸಿ,
ಮೇಳದೊಡನೆ ಹಾಡಿದಾಗ, ನಮ್ಮಲ್ಲಿ ಖಂಡಿತಾ ಒಂದು ತೃಪ್ತಿ ತುಂಬಿತ್ತು.
ಚಿತ್ರಗಳು:
http://www.facebook.com/media/set/?set=a.133329886747514.35112.100002115116128&l=e9267a2dff
ಶನಿವಾರ, ಫೆಬ್ರವರಿ 5, 2011
ಬೀಚಗಾನಹಳ್ಳಿ, ಗುಡಿಬಂಡೆ, ಆವಲ ಬೆಟ್ಟ ಕಾರ್ಯಕ್ರಮ
ಬಳಗದ ಮತ್ತೊಂದು ಸಾರ್ಥಕ ದಿನ. ಅದರ ಅನುಭವವನ್ನು ಇಲ್ಲಿ ವ್ಯಕ್ತ ಪಡಿಸೋದು ದುಸ್ಸಾಹದ ಕೆಲಸ.
ಈ ಬಾರಿ ಕುಟುಂಬದ ಜೊತೆಗೆ ಹೋಗಿದ್ದು ಮತ್ತಷ್ಟು ಭಾಗಿತ್ವವನ್ನು ಕೊಡಲು ಸಹಾಯ ಮಾಡಿತು. ಬೆಳಿಗ್ಗೆ ಸುಮಾರು ೭ ಗಂಟೆಗೆ ಹೊರಟ ನಾವು, ೯ ಗಂಟೆಗೆಲ್ಲಾ ಕಾಮತ್ ನಲ್ಲಿ ತಿಂಡಿ ಮುಗಿಸಿ ಮೊದಲು ಬೀಚಗಾನಹಳ್ಳಿಗೆ ಹೋದೆವು. ಅಲ್ಲಿನ ವಾತಾವರಣ, ಮಕ್ಕಳ ಶಿಸ್ತು ನಮ್ಮನ್ನ ಯಾವುದೋ ಲೋಕದಲ್ಲಿ ತೇಲಾಡಿಸಿತು.
ಅಲ್ಲಿನ ಕಾರ್ಯಕ್ರಮ ಮುಗಿದಮೇಲೆ. ೧೫ ಕಿ.ಮೀ ಪ್ರಯಾಣ ಮಾಡಿ ಗುಡಿಬಂಡೆಗೆ ಬಂದೆವು. ಪ್ರತಿಭಾನ್ವಿತ ಮಕ್ಕಳಿಗೆ ಬಹುಮಾನಗಳನ್ನು ಕೊಟ್ಟು, ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ತಯಾರಾಗಲು ಹುರಿದುಂಬಿಸಿ, ಆರ್ಥಿಕವಾಗಿ ನಿಶಕ್ತರಾದ ಪ್ರತಿಭೆಗಳಿಗೆ ನಮ್ಮ ನೆರವಿನ ಭರವಸೆ ಕೊಟ್ಟೆವು.
ಅಲ್ಲಿಂದ ಆವಲ ಬೆಟ್ಟಕ್ಕೆ ಹೊರಟೆವು. ಬೆಟ್ಟದ ತುದಿ ತಲುಪುವಷ್ಟರಲ್ಲಿ ಹೊಟ್ಟೆ ತಾಂಡವವಾಡುತ್ತಿತ್ತು. ಅಲ್ಲಿಳಿದ ತಕ್ಷಣ ಅಲ್ಲಿನ ವಾತಾವರಣ, ಸುಂಯ್ಯ್ ಎಂದು ಬೀಸುವ ಗಾಳಿಗೆ ಮನಸ್ಸು ಆಹಾ, ಎಂಥಾ ಸುದಿನವಿದು ಅನ್ನಿಸಿತು. ಪುಷ್ಕಳ ಊಟ ಮಾಡಿ, ಮಕ್ಕಳ ಹಾಡು, ನಾಟಕ ಆಸ್ವಾದಿಸಿ, ಅವರು ಮಾಡುವ ತರ್ಲೆಗಳಿಗೆ ಆಗಾಗ ಗುರಾಯಿಸಿ, ಬೆಟ್ಟದಲ್ಲಿ ಓಡಾಡಿ, ಅಲ್ಲೇ ಇರುವ ದೇವಸ್ಥಾನಕ್ಕೆ ಭೇಟಿ ನೀಡಿ, ಹೊರಡುವಾಗ ಸಂಜೆ ೫ ಗಂಟೆ.
ದೇಹ ತಣಿದಿತ್ತು, ಮನಸ್ಸು ಪ್ರಫುಲ್ಲಿಸಿತ್ತು. ಬರದವರ ಬಗ್ಗೆ ಮರುಕ ಹುಟ್ಟಿತ್ತು.
ಮುಂದಿನ ಬಾರಿ ನೀವು ಬನ್ನಿ. ಬರ್ತೀರಲ್ವಾ?
ಮಂಗಳವಾರ, ಸೆಪ್ಟೆಂಬರ್ 14, 2010
ಭಾನುವಾರ, ಆಗಸ್ಟ್ 15, 2010
ರಾಮಮೂರ್ತಿ ನಗರ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ರಾಮಮೂರ್ತಿ ನಗರ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿವಿಧ ಆಟೋಟಗಳ ಸ್ಪರ್ಧೆಯನ್ನು ಆಯೋಜಿಸಿದ್ದರು. ಇದರಲ್ಲಿ ವಿಜೇತರಾದ ಸುಮಾರು ೯೨ ಮಕ್ಕಳಿಗೆ ಬಳಗದ ಪರವಾಗಿ " ಪ್ರಶಂಸಾ ಪತ್ರ"ಗಳನ್ನು ವಿತರಿಸಲಾಯಿತು. ಆ ದಿನದ ವಿವಿಧ ಕಾರ್ಯಕ್ರಮಗಳಲ್ಲಿ ಬಳಗದ ವಿನಯ್ ಕುಮಾರ್, ಅಂಜನ್, ಗುರುರಾಜರಾವ್ (ಅಂಜನ್ ಅವರ ತಂದೆ) ಮತ್ತು ಮಾಜಿ ನಗರಸಭೆ ಸದಸ್ಯರಾದ ಪ್ಯಾರೆಜಾನ್ ಅವರು ಭಾಗವಹಿಸಿದ್ದರು.
ಶಾಲೆಯಲ್ಲಿ ಹೊಸ ಕಟ್ಟಡದ ಕಾಮಗಾರಿ ನಡೆಯುತ್ತಿರುವುದರಿಂದ ಅವ್ಯವಸ್ಥೆಯ ಮಧ್ಯದಲ್ಲೇ ವ್ಯವಸ್ಥಿತವಾಗಿ, ಅತಿ ಉತ್ಸಾಹದಿಂದ ಮಕ್ಕಳು, ಉಪಾಧ್ಯಾಯರು ಪಾಲ್ಗೊಂಡಿದ್ದ ರೀತಿ ಅಚ್ಚರಿ ಮೂಡಿಸುತ್ತಿತ್ತು. ಬಣ್ಣ ಬಣ್ಣದ ವೇಷಗಳಲ್ಲಿ ಮಕ್ಕಳು ನಡೆಸಿಕೊಟ್ಟ ಮನೋರಂಜನಾ ಕಾರ್ಯಕ್ರಮಗಳು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಒಂದು ಮರೆಯಲಾಗದ ದಿನ..
ಶನಿವಾರ, ಜೂನ್ 12, 2010
ಗುಡಿಬಂಡೆ ಶಾಲೆಗೆ ಕಲಿಕಾ ಸಾಮಗ್ರಿಗಳ ವಿತರಣೆ
(ಲೇಖನ: ವೀಣಾ ಪ್ರಭಾಕರ್)
ಜೂನ್ ೧೨ ರಂದು ಬೆಳಿಗ್ಗೆ ಅಂದುಕೊಂಡಂತೆಯೇ ನಮ್ಮ ಬಳಗದಿಂದ ಸುಮಾರು ೨೦ ಮಂದಿ ಗುಡಿಬಂಡೆ ಹೆಣ್ಣುಮಕ್ಕಳ ಶಾಲೆಗೆ ಹೋಗಿದ್ದೆವು. ಅಲ್ಲಿನ ಆ ಮಕ್ಕಳ ಹಾಗೂ ಅಧ್ಯಾಪಕ ವರ್ಗದವರ ಸಂಭ್ರಮ, ಉತ್ಸಾಹಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪ್ರತಿಯೊಂದು ಸಿದ್ದತೆಯಲ್ಲಿಯೂ ಶಿಸ್ತು, ಅಚ್ಚುಕಟ್ಟುತನ, ಶ್ರದ್ಧೆ, ಪ್ರಾಮಾಣಿಕತೆ ಎದ್ದು ಕಾಣುತ್ತಿತ್ತು.
ದೂರದಿಂದ ಬಂದಿರುತ್ತೇವೆಂದು ನಮಗಾಗಿಯೇ ತಯಾರಿಸಲ್ಪಟ್ಟ ವಿಧವಿಧವಾದ, ರುಚಿಯಾದ ತಿಂಡಿಗಳನ್ನು ಅಚ್ಚುಕಟ್ಟಾಗಿ ಬಡಿಸುತ್ತಾ ಮೆಲುದನಿ, ಮುಗುಳ್ನಗೆಯಿಂದ ಮತ್ತೆ ಮತ್ತೆ ವಿಚಾರಿಸಿಕೊಳ್ಳುತ್ತ ಆ ಮಕ್ಕಳು ನಮ್ಮ ಬಂಧುವರ್ಗದವರೇ ಏನೋ ಅನಿಸುವಷ್ಟು ಹೃದಯಕ್ಕೆ ಹತ್ತಿರವಾಗಿಬಿಟ್ಟರು. ಮತ್ತೆ ಕೆಲವು ಮಕ್ಕಳು ಸುಮಾರು ಆರು ಕಾರುಗಳಲ್ಲಿ ತುಂಬಿಕೊಂಡು ಹೋಗಿದ್ದ ಪುಸ್ತಕ ಮತ್ತಿತರೇ ವಸ್ತುಗಳನ್ನು ೧೦ ನಿಮಿಷಗಳ ಒಳಗಾಗಿ ಯಾವುದೇ ಅಬ್ಬರ, ಗೊಂದಲಗಳಿಲ್ಲದೆ ಮೊದಲನೇ ಮಹಡಿಗೆ ಸಾಗಿಸಿದ್ದರು.
ಮೊದಲನೇ ಮಹಡಿಯಲ್ಲಿದ್ದ (ಇತ್ತೀಚೆಗೆ ನಿರ್ಮಿತವಾಗಿರುವ) ಸಭಾಂಗಣದಲ್ಲಿ ಶಾಲೆಯ ಅಷ್ಟೂ ಮಕ್ಕಳೂ ಸ್ವಲ್ಪವೂ ಗಲಾಟೆ ಇಲ್ಲದೆ, ಸಾಲಾಗಿ, ನೂಕಾಡದೆ ಬಂದು ಸೇರಿದರು. ಸ್ವಲ್ಪ ಹೆಚ್ಚೇ ಅನಿಸುವಷ್ಟು ಭಾಷಣಗಳ ಸರಮಾಲೆಗಯನ್ನು ಹೊಂದಿದ್ದ ಸುಮಾರು ಎರಡೂವರೆ ಘಂಟೆಗಳ ಕಾಲ ನಡೆದ ಕಾರ್ಯಕ್ರಮವನ್ನು ಬಹಳ ಸಂಯಮ ಮತ್ತು ಶಿಸ್ತಿನಿಂದ ವೀಕ್ಷಿಸಿದರು.
ಹೂಗುಚ್ಛಗಳಿಗಾಗಿಯೇ ಸಾವಿರಾರು ರುಪಾಯಿಗಳನ್ನು ವೆಚ್ಚ ಮಾಡುವ ಈ ದಿನಗಳಲ್ಲಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಒಂದೊಂದು ಗುಲಾಬಿ ಹೂವನ್ನು ಕೊಟ್ಟು ಆತ್ಮೀಯವಾಗಿ ಸ್ವಾಗತಿಸಿದ್ದು ಎಲ್ಲರಿಗೂ ಮಾದರಿಯಾಗಿತ್ತು.
ಆಯಾ ಕಾರ್ಯಕ್ರಮಕ್ಕೆ ಯಾರ್ಯಾರು ನಿಯೋಜಿಸಲ್ಪಟ್ಟಿದ್ದರೋ ಆ ಮಕ್ಕಳು ಸ್ವಲ್ಪವೂ ತಡಮಾಡದೆ ಬಂದು ಅವರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಹೋಗುತ್ತಿದ್ದರು. ಲೀಲಾಜಾಲವಾಗಿ, ಸುಮಧುರವಾಗಿ, ಒಂದೇ ಕಂಠದಲ್ಲಿ ನಾಡಗೀತೆಯನ್ನು ಹಾಡಿದ ಮಕ್ಕಳಿಂದ ಹಿಡಿದು, ಒಂದೇ ರೀತಿಯಾಗಿ ಚಪ್ಪಾಳೆ ತಟ್ಟುವುದರವರೆಗೂ ಆ ಮಕ್ಕಳು ತಾವೆಲ್ಲರೂ ಒಂದೇ, ಸಾಧನೆಯ ಕಡೆಗೆ ಎಲ್ಲರೂ ಒಟ್ಟಾಗಿಯೇ ಹೆಜ್ಜೆಗಳನ್ನಿಡುತ್ತಿದ್ದೇವೆ ಎಂದು ಪರೋಕ್ಷವಾಗಿ ಹೇಳುವಂತಿತ್ತು.
ಆ ದಿನ ಆ ಮಕ್ಕಳಿಗೆ ಹಂಚಲ್ಪಟ್ಟ ಸಾಮಾನುಗಳು:
೧) ೧೩ ಮಕ್ಕಳಿಗೆ - ಬ್ಯಾಗ್, ಜಾಮಿಟ್ರಿ ಪೆಟ್ಟಿಗೆ, ಲೇಖನಿ, ಪೆನ್ಸಿಲ್, ರಬ್ಬರ್, ೧ ವರ್ಷಕ್ಕಾಗುವಷ್ಟು ಬರೆಯುವ ಪುಸ್ತಕಗಳು, ಬಿಳಿ ಸಮವಸ್ತ್ರ, ಶೂ ಮತ್ತು ಕಾಲು ಚೀಲ (ಸಾಕ್ಸ್).
೨) ೧೨ ಮಕ್ಕಳಿಗೆ - ಜಾಮಿಟ್ರಿ ಪೆಟ್ಟಿಗೆ, ಲೇಖನಿ, ಪೆನ್ಸಿಲ್, ರಬ್ಬರ್, ೧ ವರ್ಷಕ್ಕಾಗುವಷ್ಟು ಬರೆಯುವ ಪುಸ್ತಕಗಳು
೩) ಶಾಲೆಯ ಎಲ್ಲಾ ಮಕ್ಕಳಿಗೂ ಕನ್ನಡ-ಕನ್ನಡ, ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟುಗಳು, ಒಂದು ನೋಟ್ ಪುಸ್ತಕ, ಲೇಖನಿ, ಪೆನ್ಸಿಲ್ ಹಾಗು ರಬ್ಬರ್.
೪) ಎಂಟು, ಒಂಭತ್ತು ಹಾಗು ಹತ್ತನೆಯ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಮಕ್ಕಳಿಗೆ ಕೈಗಡಿಯಾರ ಮತ್ತು ಅಭಿನಂದನಾ ಪತ್ರ.
೫) ೧೦ ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಈಗ ಕಾಲೇಜು ಸೇರಿಸುವ ಇಬ್ಬರು ವಿದ್ಯಾರ್ಥಿನಿಯರಿಗೆ - ನೋಟ್ ಪುಸ್ತಕಗಳು, ಪಠ್ಯ ಪುಸ್ತಕಗಳು ಮತ್ತು ಹೊಸ ಬಟ್ಟೆಗಳು
೬) ಇದರ ಜೊತೆಗೆ ತಾವೆಲ್ಲರೂ ಕೊಟ್ಟ ಉಪಯೋಗಿಸಿದ ಬಟ್ಟೆಗಳನ್ನು ಅಧ್ಯಾಪಕರ ಸುಪರ್ದಿಗೆ ಕೊಟ್ಟು, ನಂತರ ಅವರಲ್ಲೇ ವಿತರಣೆ ಮಾಡಿಕೊಳ್ಳಲೂ ಕೇಳಿಕೊಂಡೆವು
ಅವರವರಿಗೆ ದೊರೆತ ವಸ್ತುಗಳನ್ನು ತೆಗೆದುಕೊಳ್ಳುತ್ತಾ ಹೊರಟ ಆ ಮಕ್ಕಳ ಕಣ್ಣುಗಳಲ್ಲಿನ ಮಿಂಚು ಮತ್ತು ಆ ಆನಂದದ ಮುಂದೆ ನೂರಾರು ಕೋಟಿ ರೂಪಾಯಿಗಳೂ ಕೂಡ ಗೌಣ ಅನ್ನಿಸುತ್ತಿತ್ತು. ಎಲ್ಲರ ಪರವಾಗಿ ಒಬ್ಬ ವಿದ್ಯಾರ್ಥಿನಿ ಎದ್ದುನಿಂತು, ತಮಗೆ ಸಿಕ್ಕಂಥಹ ಸಾಮಗ್ರಿಗಳನ್ನು ಪೂರ್ಣವಾಗಿ ಉಪಯೋಗಿಸಿಕೊಂಡು ಚೆನ್ನಾಗಿ ಓದಿ, ಮುಂದೊಂದು ದಿನ ಇದೇ ರೀತಿ ಬೇರೆಯ ಮಕ್ಕಳಿಗೆ ಸಹಾಯಕರಾಗಿ ನಿಲ್ಲುತ್ತೇವೆಂದು ಹೇಳಿದಾಗ ಆ ಧನಿಯಲ್ಲಿದ್ದ ಭರವಸೆ ಮತ್ತು ನೈಜತೆಗೆ ಕಣ್ಣು ತುಂಬಿಬಂತು.
ಟೀಂ ವರ್ಕ್ ಮತ್ತು ಟೀಂ ಬಿಲ್ಡಿಂಗ್ ಗಳಲ್ಲಿ ಯಾವ ಕಾರ್ಪೋರೇಟ್ ಗುರುಗಳಿಗೂ ಸವಾಲು ಹಾಕುವಹಾಗಿರುವ ಈ ಮಕ್ಕಳನ್ನು ನೋಡಿ ಮನಸ್ಸು ನಿಬ್ಬೆರಗಾಯಿತು. ಒಟ್ಟಿನಲ್ಲಿ ಈ ಮೂಲಕ ನಾವೆಲ್ಲರೂ ಕೂಡಿಸಿ ಕೊಟ್ಟಂತಹ ಪುಸ್ತಕಗಳು ಮತ್ತಿತರ ವಸ್ತುಗಳು ಸಾರ್ಥಕವಾಗಿದೆ ಎಂದು ತಿಳಿದು ಸಂತೋಷವಾಯಿತು. ನಿಸ್ವಾರ್ಥ ಮನಸ್ಸಿನಿಂದ ಈ ಮಕ್ಕಳಿಗೆ ಎಲ್ಲಾ ವಸ್ತುಗಳೂ ದೊರಕುವಂತೆ ಮಾಡಿರುವ ವೆಂಕಟೇಶ್ ಮೂರ್ತಿ ಮತ್ತಿತರ ಶಿಕ್ಷಕರನ್ನು ಇಲ್ಲಿ ನೆನೆಯಲೇ ಬೇಕು. ಇವರ ನೇತೃತ್ವದಲ್ಲಿ ಈ ವಸ್ತುಗಳು ಮಕ್ಕಳಿಂದ ಪೂರ್ಣವಾಗಿ ಉಪಯೋಗಿಸಲ್ಪಡುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.
![](https://blogger.googleusercontent.com/img/b/R29vZ2xl/AVvXsEgQh-hBsrxS_RtV0MHywJwNky2ZmhATsgiLFnw3Jpzdxfzne_apTIbEOVPy8GPBjmacIYQVcRuL9ixIuad6FS9dijPai4WEehYB5Wp5aHTOaQzdvW0NwyqGCU6djo4ZB2h3m1-IgG6O2Hw/s320/AbhinandanaPathra.jpg)
(ಲೇಖನ: ರವಿ ಪೂಜಾರಿ)
ಬುಧವಾರ, ಜೂನ್ 9, 2010
ಶನಿವಾರ, ಜೂನ್ 5, 2010
ರಾಮಮೂರ್ತಿ ನಗರದ ಶಾಲೆಗೆ ನೋಟ್ ಪುಸ್ತಕ ವಿತರಣೆ
ಸಾರ್ಥಕತೆಯ ಹೊಸ ಭಾಷ್ಯದಂತಿತ್ತು ಅಂದಿನ ದಿನ. ಪುಸ್ತಕಗಳು ಹೇರಿದ್ದ ಕಾರನ್ನು ಶಾಲೆಯ ಆವರಣದೊಳಗೆ ತಂದು ನಿಲ್ಲಿಸಿದಾಗ, ಧೋ ಎಂದು ಮುತ್ತಿತ್ತು ಹುಡುಗರ ದಂಡು. "ಸರ್, ಪುಸ್ತಕಗಳನ್ನು ಕೊಡ್ತೀರಂತೆ, ಎಷ್ಟು ಕೊಡ್ತೀರ" ಅಂತೊಬ್ಬ, "ಸರ್, ನನ್ಗೂ ಒಂದು ಕೊಡಿ" ಅಂತ ಮತ್ತೊಬ್ಬ ಕಿರುಚ್ತಿದ್ದಾಗ ಉಪಾಧ್ಯಾಯರು ಜೋರಾಗಿ "ಏಯ್, ಎಲ್ರಿಗೂ ಕೊಡ್ತಾರೆ ಹೋಗ್ರಿ ಈಗ" ಅಂತ ಗದರಿದರು.
ಅಷ್ಟರಲ್ಲಿ ಬಳಗದ ಎನ್. ಚಂದ್ರಶೇಖರ ಮತ್ತು ಕುಟುಂಬಸಮೇತರಾಗಿ ಸುಶೀಲಾ ಗೌಡ ಬಂದರು. ಇಸ್ಕಾನ್ ನಿಂದ ಬಿಸಿಯೂಟಕ್ಕೆ ಹುಡುಗರೆಲ್ಲಾ ಸಾಲಾಗಿ ನಿಂತಿದ್ದರು. ಬಿಸಿಬೇಳೆ ಭಾತ್ ಮತ್ತು ಕಡ್ಲೆ ಬೇಳೆ ಪಾಯಸದ ಘಮ್ ಎಲ್ಲಕಡೆ ಆವರಿಸಿತ್ತು.
ಮಕ್ಕಳ ಊಟವೆಲ್ಲಾ ಮುಗಿಯುತ್ತಿದ್ದಂತೆ ಎಲ್ಲರನ್ನೂ ಸರತಿಯಲ್ಲಿ ನಿಲ್ಲಿಸಲಾಯ್ತು. ೧,೨ ಮತ್ತು ೩ ನೇ ತರಗತಿಯ ("ನಲಿಕಲಿ" ಅಂತಾರೆ) ಮಕ್ಕಳಿಗೆ ನೋಟ್ ಪುಸ್ತಕ, ಪೆನ್ಸಿಲ್ ಮತ್ತು ಎರೇಸರ್ ಹಂಚಲಾಯ್ತು. ಆದ್ರೆ ೪,೫,೬ ಮತ್ತು ೭ ನೇ ತರಗತಿಯ ತಲಾ ೧೦ ಮಕ್ಕಳಿಗೆ ಮಾತ್ರ ಪುಸ್ತಕ ಕೊಡುವ ಯೋಜನೆ ಇತ್ತು. ಆದರೆ ಉತ್ಸಾಹದ ಬುಗ್ಗೆಗಳಿದ್ದ ಹಾಗಿದ್ದ ಮಕ್ಕಳಿಗೆ ನಿರಾಸೆ ಮಾಡಲು ಮನ್ನಸ್ಸಾಗಲಿಲ್ಲ. ಹಾಗಾಗಿ ಪುಸ್ತಕಗಳನ್ನು ಮುಂದೊಮ್ಮೆ ಉಪಾಧ್ಯಾರಿಗೇ ಕೊಡಲು ಹೇಳಿ ಎಲ್ಲರಿಗೂ ಪೆನ್ಸಿಲ್ ಮತ್ತು ಎರೇಸರ್ ನ್ನು ಕೊಟ್ಟೆವು. ಆ ಮಕ್ಕಳ ಉತ್ಸಾಹ, ಅವರ ಸಂತೋಷ ಖಂಡಿತಾ ಪದಗಳಲ್ಲಿ ಮೂಡಿಸಲು ಆಗ್ತಿಲ್ಲ. ಅದನ್ನು ಸವಿದರೇ ಸೊಗಸು.
ಉಪಾಧ್ಯಾಯರೆಲ್ಲರೂ ಬಳಗಕ್ಕೇ ಧನ್ಯವಾದಗಳನ್ನು ಅರ್ಪಿಸಿದರು. ಶೈಕ್ಷಣಿಕ ವರ್ಷ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಪುಸ್ತಕಗಳನ್ನು ಕೊಟ್ಟದ್ದು ಬಹಳ ಉಪಯುಕ್ತವಾಯ್ತು ಅಂತ ಬಹಳ ಸಲ ನೆನೆದರು.
ಕಾರಿನಲ್ಲಿದ್ದ ಬಳಗದ ಲೇಬಲ್ ಗಳನ್ನು ನೋಡಿದ ಕೆಲವು ಹುಡುಗರು, "ಸರ್, ನಮ್ಗೆ ಆ ಸ್ಟಿಕ್ಕರ್ಸ್ ಕೊಡಿ" ಅಂದ್ರು. ಸರಿ, ಉಳಿದ ಸುಮಾರು ೫೦ ಲೇಬಲ್ ಗಳನ್ನು ಕೊಟ್ಟಾಗ ಜಗಳವಾಡಿಕೊಂಡು ಹಂಚಿಕೊಂಡರು. ಆ ಜಗಳ, ಹುಸಿ ಮುನಿಸು, ಸಂತೋಷ, ಉತ್ಸಾಹ, ಮುಗ್ಧತೆ, ನಗು - ಛೇ ನಮಗೆ ಬರಲು ಸಾಧ್ಯವೇ ಇಲ್ಲ. ಮಕ್ಕಳು ಮಕ್ಕಳೇ !!
ಸಾರ್ಥಕ ಭಾವದಿಂದ ಮನ ತುಂಬಿ ಬಂದಿತ್ತು. ಮುಂದಿನ ವರ್ಷ ಖಂಡಿತಾ ಎಲ್ಲ ಮಕ್ಕಳಿಗೂ ಪುಸ್ತಕಗಳನ್ನು ಕೊಡಬೇಕೆಂಬ ನಿರ್ಧಾರದೊಂದಿಗೆ ಎಲ್ಲರನ್ನೂ ಬೀಳ್ಕೊಟ್ಟೆವು.
ಈ ಸಾರ್ಥಕ ಯೋಜನೆಯನ್ನು ಸಾಕಾರಗೊಳಿಸಿದ ಬಳಗದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
-ಅಂಜನ್